ಬೆಂಗಳೂರು: ದೇಶದಲ್ಲಿ ರಾಮಮಂದಿರ ದೇಣಿಗೆ ವಿವಾದ ಕಾವು ಪಡೆಯುತ್ತಿದ್ದು, ವಿಪಕ್ಷಗಳು ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ಬಿಜೆಪಿ ವಿರುದ್ದ ಕಿಡಿ ಕಾರುತ್ತಿದ್ದಾರೆ. ಇದೀಗ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ (BK Hariprasad) ಆರೋಪವೊಂದನ್ನ ಮಾಡಿದ್ದು " ಮುಕೇಶ್ ಅಂಬಾನಿ ಕೊಟ್ಟಿದ್ದ 900 ಕೋಟಿ ದೇಣಿಕೆ ಹಣಕ್ಕೆ ಲೆಕ್ಕ ಇಲ್ಲ, ಘಜ್ನಿ, ಘೋರಿ ನಂತರ ಬಿಜೆಪಿಯವರೇ ದೇಶವನ್ನು ಲೂಟಿ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ (Bengaluru) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಮಮಂದಿರ ದೇಣಿಗೆ ವಿವಾದ (Ram Mandir Donation Row) ಕುರಿತು ಶಿವಸೇನೆ ಸಂಜಯ್ ರಾವತ್ ಪ್ರಶ್ನೆಕೇಳಿದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಇತಿಹಾಸ ಅಂದ್ರೆ ಮಹಮ್ಮದ್ ಘಜ್ನಿ ಅಂತಾರೆ, ಲೂಟಿ ಹೊಡೆದವನು ಅಂತ ಬಿಜೆಪಿಯವರು ಪದೇ ಪದೇ ಹೇಳ್ತಾರೆ. ಘಜ್ನಿ ಬಿಟ್ಟರೆ ಬಿಜೆಪಿಯವರೇ ಲೂಟಿ ಮಾಡಿದ್ದು. ಈ ಹಿಂದೆ ರಾಮಮಂದಿರ ಕಟ್ತೇವೆ ಅಂತ ಲೂಟಿ ಹೊಡೆದಿದ್ರು. ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ. ಈಗ ಪೇಜಾವರ ಶ್ರೀಗಳು ಲೆಕ್ಕ ಕೇಳಿದ್ದಾರೆ. ಪ್ರಹ್ಲಾದ್ ಜೋಶಿ (Pralhad Joshi) ಶ್ರೀಗಳ ವಿರುದ್ಧ ಇದ್ದಾರಾ? ಶ್ರೀಗಳ ಮಾತಿಗೆ ಏನು ಹೇಳ್ತಾರೆ ಎಂದು ಪ್ರಶ್ನಿಸಿದರು.
ಪ್ರಹ್ಲಾದ್ ಜೋಶಿ ವಿರುದ್ದ ಬಿಕೆ ಆಕ್ರೋಶ..!
ರಾಮಮಂದಿರ ದೇಣಿಗೆ ವಿವಾದ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಜೋಶಿ ಅವರು ಕೇಂದ್ರದ ಮಂತ್ರಿ, ಅಪಾರ ಜ್ಞಾನಭಂಡಾರದ ಮೂರ್ತಿ. ನನಗೆ ಹೇಳ್ತಾರಂತೆ ನಾನ್ಯಾಕೆ ಅವರ ಮಾತು ಕೇಳಬೇಕು? ಹಿಂದೆ ಯಡಿಯೂರಪ್ಪ ಪಕ್ಷ ತೊರೆದಿದ್ರು ಆಗ ಅವರ ಬಗ್ಗೆ ಜೋಶಿ ಏನೇನೆಲ್ಲ ಹೇಳಿದ್ರು? ಈಗ ಅವರ ಪಾದಪೂಜೆ ಮಾಡ್ತಾರೆ ರಾಮಮಂದಿರ ಟ್ರಸ್ಟ್ ನವರು ಲೆಕ್ಕ ಕೊಡಲ್ಲ ಅಂತಾರೆ. ಇವರು ರಾಮನನ್ನೂ ಬಿಟ್ಟಿಲ್ಲ. ರಾಮನ ಹೆಸರಲ್ಲಿ ಕಳ್ಳತನ, ಲೂಟಿ ಮಾಡಿದ್ರು ಎಂದು ಕಿಡಿ ಕಾರಿದರು.