ತಿರುವನಂತಪುರಂ : ಕೇರಳದ ನೆಡುಮಂಗಾಡ್ ಎಂಬಲ್ಲಿ 1.5 ವರ್ಷದ ಮಗು ಸಾವನ್ನಪ್ಪಿದ್ದ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹೆತ್ತ ತಾಯಿ ಮತ್ತು ಮಲ ತಂದೆ ಸೇರಿಕೊಂಡು ಪುಟ್ಟ ಮಗುವಿಗೆ ಚಿತ್ರ ಹಿಂಸೆ ನೀಡಿ ಕೊಲೆ ಮಾಡಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಘಟನೆ ಸಂಬಂಧ ಕೇರಳದಲ್ಲಿ ಭಾರೀ ಜನಾಕ್ರೋಶ ವ್ಯಕ್ತವಾಗಿದೆ.
ಏನಿದು ಘಟನೆ...!
ಕೇರಳದ ಅಖಿಲಾ ಮತ್ತು ಅಖಿಲ್ ಎಂಬುವವರು ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದರು, ಆದರೆ ಅಖಿಲಾ 3 ತಿಂಗಳ ಗರ್ಭಿಣಿಯಾಗಿದ್ದಾಗ ಅಖಿಲ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು, ಇದರ ನಡುವೆ ಅಖಿಲಾ ಗಂಡು (ಸಾವನ್ನಪ್ಪಿರುವ) ಮಗುವಿಗೆ ಜನ್ಮ ನೀಡಿದ್ದಳು. ಇದಾದ ನಂತರ ಕೆಲ ದಿನಗಳ ಕಾಲ ಪತಿಯ ಮನೆಯಲ್ಲಿದ್ದ ಅಖಿಲಾ ನಂತರ ಪ್ರಿಯತಮ ಅಷ್ಕರ್ ಜೊತೆ ಪಣವೂರಿನಲ್ಲಿ ಬಾಡಿಗೆ ಮನೆ ಪಡೆದು ವಾಸಿಸಲು ಶುರು ಮಾಡಿದ್ದಳು. ಆದರೆ ಇತ್ತೀಚೆಗೆ ಇಬ್ಬರು ಸೇರಿ ಮಗುವಿಗೆ ಚಿತ್ರಹಿಂಸೆ ನೀಡಲು ಆರಂಭಿಸಿದ್ದರು ಎಂಬುದು ಆರಂಭಿಕ ತನಿಖೆಯಲ್ಲಿ ಬಯಲಾಗಿದೆ.
ಮಗುವಿಗೆ ಚಿತ್ರಹಿಂಸೆ ಕೊಟ್ಟಿ ಕೊಲೆ ಮಾಡಿದ್ದ ಪಾಪಿಗಳು...!
ಕಳೆದ ಮೇ.29ರಂದು (ಶುಕ್ರವಾರ) ಮಗು ಆಹಾರ ಸೇವಿಸಿದ ನಂತರ ಕ್ರೂರವಾಗಿ ಹಲ್ಲೆ ನಡೆಸಿದ್ದು. ಈ ವೇಳೆ ನಿತ್ರಾಣಗೊಂಡ ಮಗುವನ್ನ ಆಸ್ಪತ್ರೆಗೆ ಕರೆತಂದಿದ್ದಾರೆ, ವೈದ್ಯರ ಬಳಿ ʻಮಗು ಊಟ ಸೇವಿಸುವಾಗ ಗಂಟಲಲ್ಲಿ ಅನ್ನ ಸಿಲುಕಿ ನಿತ್ರಾಣಗೊಂಡಿದೆʼ ಎಂದು ಸುಳ್ಳು ಹೇಳಿದ್ದಾರೆ. ಈ ವೇಳೆ ಮಗುವನ್ನ ಪರೀಕ್ಷಿದ ವೈದ್ಯರಿಗೆ ಮಗು ಆಗಲೇ ಸಾವನ್ನಪ್ಪಿರುವುದು ಧೃಡಪಟ್ಟಿದೆ. ಮಗುವಿನ ಸಾವಿನ ಬಗ್ಗೆ ಅನುಮಾನಗೊಂಡ ಅಜ್ಜಿ-ತಾತ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಅಶ್ಕರ್ನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಸತ್ಯಾಂಶ ಬೆಳಕಿಗೆ ಬಂದಿದೆ.
ಮಗುವಿನ ಸಾವಿನ ಬಗ್ಗೆ ಅನುಮಾನ ಬಂದ ಕಾರಣ, ಮಗುವಿನ ಮರಣೋತ್ತರ ಪರೀಕ್ಷೆ ನಡೆಸಿದ್ದು, ಈ ವೇಳೆ ಮಗುವಿನ ದೇಹದ ಮೇಲೆ 51 ಗಾಯಗಳು ಕಂಡು ಬಂದಿದೆ. ಮಗುವಿನ ಎರಡು ತೋಳುಗಳನ್ನ ಮುರಿದಿದ್ದು, ಪಾದಗಳ ಮೇಲೆ ಆಳವಾದ ಸುಟ್ಟ ಗಾಯಗಳಿರುವುದು ಕಂಡು ಬಂದಿದೆ.
ಸಾಕ್ಷ್ಯ ನಾಶಕ್ಕೆ ಯತ್ನ...!
ಅಪರಾಧದ ನಂತರ ವಿಧಿವಿಜ್ಞಾನ ಸಾಕ್ಷ್ಯಗಳನ್ನು ನಾಶಮಾಡಲು ಸಂಚು ರೂಪಿಸಿದ್ದನ್ನು ತನಿಖಾಧಿಕಾರಿಗಳು ಸಾಕ್ಷ್ಯಗಳನ್ನು ಸಂಗ್ರಹಿಸುವಾಗ ಬಹಿರಂಗಪಡಿಸಿದ್ದಾರೆ. ಕುಟುಂಬದವರು ರಕ್ತದ ಕಲೆಗಳನ್ನು ಅಳಿಸಲು ಮನೆಯ ಒಳಭಾಗವನ್ನು ತೊಳೆದಿದ್ದಾರೆ ಎನ್ನಲಾಗಿದೆ. ಮಗುವಿನ ಬಟ್ಟೆಗಳ ಅವಶೇಷಗಳು ಮತ್ತು ಹಿತ್ತಲಿನಲ್ಲಿ ಸುಟ್ಟು ಬೂದಿಯಾಗಿದ್ದ ವಿವಿಧ ದಾಖಲೆಗಳನ್ನು ಅಧಿಕಾರಿಗಳು ಪತ್ತೆ ಮಾಡಿದರು. ಮಗುವಿನ ಮುರಿದ ತೋಳುಗಳಿಗೆ ಬಳಸಿ ಬಿಸಾಡಲಾದ ಪ್ಲಾಸ್ಟರ್ ಕ್ಯಾಸ್ಟ್ಗಳು ಸಹ ಮನೆಯ ಬಳಿ ಕಂಡುಬಂದಿವೆ.

ಜೊತೆಗೆ ಆರೋಪಿ ಅಶ್ಕರ್ ವಿರುದ್ದ ಮೊದಲ ಪತ್ನಿಗೆ ಕೌಟುಂಬಿಕ ಕಿರುಕುಳ ಕೊಟ್ಟ ಆರೋಪವಿದ್ದು, ವರದಕ್ಷಿಣೆಗಾಗಿ ಕಿರುಕುಳ ಕೊಟ್ಟು ದೈಹಿಕ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಇದೀಗ ಆಕೆ ಕೋಮದಲ್ಲಿದ್ದು ಕಳೆದೊಂದು ವರ್ಷದಿಂದ ತಿರುವನಂತಪುರಂನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.