ನವದೆಹಲಿ : ಸಿಎಎ ವಿರುದ್ದದ ಗಲಭೆಯ ಪ್ರಮುಖ ಆರೋಪಿ ಉಮರ್ ಖಾಲಿದ್ಗೆ ದೆಹಲಿ ಹೈಕೋರ್ಟ್ 3 ದಿನಗಳ ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ. ಕೆಲ ದಿನಗಳ ಹಿಂದಷ್ಟೇ ಈತನ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಕೆಳಹಂತದ ನ್ಯಾಯಾಲಯ, ಉಮರ್ನ ಜಾಮೀನು ಅರ್ಜಿಯನ್ನ ತಿರಸ್ಕರಿಸಿತ್ತು. ಇದೀಗ ಈತನ ಅರ್ಜಿಯನ್ನ ಪುರಸ್ಕರಿಸಿರುವ ದೆಹಲಿ ಹೈಕೋರ್ಟ್ ಈತನಿಗೆ 3 ದಿನಗಳ ರಿಲೀಫ್ ನೀಡಿದೆ.
ಕೆಲ ದಿನಗಳ ಹಿಂದಷ್ಟೆ ಉಮರ್ ಖಾಲಿದ್ನ ಚಿಕ್ಕಪ್ಪ ತೀರಿಕೊಂಡಿದ್ದರು. ಇದರ ಜೊತೆಗೆ ಉಮರ್ನ ತಾಯಿಗೆ ಸರ್ಜರಿಯೊಂದು ನಡೆಯುವುದಿತ್ತು. ಈ ಕಾರಣವನ್ನಿಟ್ಟುಕೊಂಡು ಉಮರ್ ಜಾಮೀನು ನೀಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ ಈ ಅರ್ಜಿಯ ವಿಚಾರಣೆ ನಡಸಿದ ಕೆಳ ಹಂತದ ನ್ಯಾಯಾಲಯ. " ಮೃತ ಚಿಕ್ಕಪ್ಪನ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲೇ ಬೇಕಾದ ಅಗತ್ಯವಿಲ್ಲ ಮತ್ತು ಸರ್ಜರಿಯ ನಂತರ ಉಮರ್ನ ತಾಯಿಯನ್ನು ನೋಡಿಕೊಳ್ಳಲು ಆತನ ಕುಟುಂಬದ ಉಳಿದ ಸದಸ್ಯರಿದ್ದಾರೆ ಎಂದು ಹೇಳಿ ಜಾಮೀನು ತಿರಸ್ಕರಿಸಿತ್ತು. ಇದನ್ನ ಪ್ರಶ್ನಿಸಿಕೊಂಡು ಉಮರ್ ದೆಹಲಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದನು.
ದೆಹಲಿ ಗಲಭೆ; 53 ಜನರ ಸಾವಿಗೆ ಕಾರಣನಾಗಿದ್ದ ಉಮರ್..!
2020ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಗಲಭೆಯ ಮಾಸ್ಟರ್ ಮೈಂಡ್ ಆಗಿ ಉಮರ್ ಖಾಲಿದ್ನನ್ನು ನೋಡಲಾಗುತ್ತದೆ. ಸಿಎಎ ಮತ್ತು ಎನ್ಆರ್ಸಿ ವಿರುದ್ದದ ಈ ಹೋರಾಟ ಹಿಂಸಚಾರ ರೂಪವನ್ನು ಪಡೆದುಕೊಂಡು ದೆಹಲಿಯಲ್ಲಿ 53 ಜನ ಸಾವನ್ನಪ್ಪಿದ್ದರು ಮತ್ತು 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಗಲಭೆಗೆ ಕಾರಣನಾಗಿದ್ದ ಈತನ ಮೇಲೆ ದೆಹಲಿ ಪೊಲೀಸರು UAPA (Unlawful Activities Prevention Act) ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದರು.