ನವದೆಹಲಿ: ಸಾಮಾಜಿಕ ಜಾಲತಾಣ ಸಂಸ್ಥೆ ಮೆಟಾ (Meta) ಕುರಿತ ವಿವಾದದ ನಡುವೆ ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ಪ್ರಧಾನಿ ಮೋದಿ ಈಗ ತಮ್ಮದೇ ದೇಶದ ನಾಗರಿಕರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ" ಎಂದು ಅವರು ಆರೋಪಿಸಿದ್ದಾರೆ.
ಸರ್ಕಾರ ತನ್ನನ್ನು ಟೀಕಿಸುವ ಧ್ವನಿಗಳನ್ನು ಹತ್ತಿಕ್ಕಲು ಕಾನೂನುಗಳನ್ನು ಬಳಸುತ್ತಿದೆ ಹಾಗೂ ಸಾಮಾಜಿಕ ಜಾಲತಾಣಗಳ ಮೇಲೂ ಒತ್ತಡ ಹೇರುತ್ತಿದೆ ಎಂದು ಕೇಜ್ರಿವಾಲ್ ಟೀಕಿಸಿದ್ದಾರೆ. ದೇಶದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರನ್ನು ಗುರಿಯಾಗಿಸಲಾಗುತ್ತಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.ಈ ಹೇಳಿಕೆ, ಪ್ರಧಾನಿ ಮೋದಿಯ ಫೇಸ್ಬುಕ್ ಪೋಸ್ಟ್ನ್ನು ಮೆಟಾ ತಾತ್ಕಾಲಿಕವಾಗಿ ನಿರ್ಬಂಧಿಸಿದ್ದ ಪ್ರಕರಣದ ನಂತರ ಬಂದಿದೆ. ಬಳಿಕ ಮೆಟಾ ತನ್ನ ಕ್ರಮಕ್ಕೆ ಕ್ಷಮೆಯಾಚಿಸಿದ್ದು, ವಿಷಯ ನಿರ್ವಹಣೆ (Content Moderation) ಸಂಬಂಧ ಭಾರತ ಸರ್ಕಾರ ಸಂಸ್ಥೆಯ ಕಾರ್ಯವೈಖರಿಯನ್ನು ಪರಿಶೀಲಿಸುತ್ತಿದೆ.
ಇದಕ್ಕೂ ಮುನ್ನ, ಯಾವುದೇ ಸಮರ್ಪಕ ಕಾರಣ ನೀಡದೆ ಭಾರತದಲ್ಲಿ ತನ್ನ ಇನ್ಸ್ಟಾಗ್ರಾಂ ಖಾತೆಯನ್ನು ಮೆಟಾ ನಿರ್ಬಂಧಿಸಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದರು. ಈ ಬೆಳವಣಿಗೆಗಳ ನಡುವೆಯೇ ಅವರು ಕೇಂದ್ರ ಸರ್ಕಾರ ಹಾಗೂ ಮೆಟಾ ವಿರುದ್ಧ ಹೊಸ ಆರೋಪಗಳನ್ನು ಮಾಡಿದ್ದಾರೆ.ಕೇಜ್ರಿವಾಲ್ ಅವರ ಆರೋಪಗಳಿಗೆ ಕೇಂದ್ರ ಸರ್ಕಾರದಿಂದ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಹೊರಬರಬೇಕಿದೆ.