ಬೆಂಗಳೂರು: ರಾಜ್ಯದಲ್ಲಿ ಎಸ್ಐಆರ್ ಮುಕ್ತಾಯವಾಗಿದ್ದು, ಕರುಡು ಮತದಾರರ ಪಟ್ಟಿಯು ಬಿಡುಗಡೆಯಾಗಿದೆ, ಒಟ್ಟಾರೆಯಾಗಿ ರಾಜ್ಯದಲ್ಲಿ ಸುಮಾರು 1 ಕೋಟಿ ಮತದಾರರನ್ನ ಪಟ್ಟಿಯಿಂದ ಹೊರಗಿಡಲಾಗಿದ್ದು, ಈ ಪ್ರಕ್ರಿಯೆಯನ್ನ ರದ್ದುಗೊಳಿಸಬೇಕು ಎಂದು ಚಿತ್ರನಟ ಪ್ರಕಾಶ್ ರಾಜ್ ಒತ್ತಾಯಿಸಿದ್ದಾರೆ, ಸಂಪೂರ್ಣ ಪ್ರಕ್ರಿಯೆಯೆ ದೋಷಪೂರಿತವಾಗಿದೆ ಎಂದು ಆರೋಪಿಸಿರುವ ಪ್ರಕಾಶ್ ರಾಜ್, ಸೆಪ್ಟಂಬರ್ 1ರಂದು ʻಚುನಾವಣಾ ಆಯೋಗ ಚಲೋʼ ನಡೆಸುವುದಾಗಿ ಘೋಷಿಸಿದ್ದಾರೆ.
ನಿನ್ನೆ (ಆ.25) ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಟ ಪ್ರಕಾಶ್ ರಾಜ್,ʻ ಲಕ್ಷಾಂತರ ಅರ್ಹ ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಆರೋಪಿಸಿದರು. ಅಲ್ಲದೆ ಎಸ್ಐಆರ್ ಪ್ರಕ್ರಿಯೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ಪ್ರಕ್ರಿಯೆ "ದೋಷಪೂರಿತ", "ಅವೈಜ್ಞಾನಿಕ" ಎಂದು ಆರೋಪಿಸಿದ ನಟ ಪ್ರಕಾಶ್ ರಾಜ್ ಅವರು, ಸೆಪ್ಟೆಂಬರ್ 1ರಂದು "ಚುನಾವಣಾ ಆಯೋಗ ಚಲೋ" ನಡೆಸುವುದಾಗಿ ಮಂಗಳವಾರ ಘೋಷಿಸಿದ್ದಾರೆ.
ಮುಂದುವರಿದು ಮಾತನಾಡಿರುವ ಪ್ರಕಾಶ್ ರಾಜ್ ʻಇನ್ನೇನು 2 ವರ್ಷಗಳಲ್ಲಿ ವಿಧಾನಸಭೆ ಚುನಾವಣೆ ಬರಲಿದೆ, ಇದರ ನಡುವೆ ಚುನಾವಣಾ ಆಯೋಗ ಮತದಾರರಲ್ಲಿ ಯಾವುದೇ ಜಾಗೃತಿ ಮೂಡಿಸದೆ ತರಾತುರಿಯಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಸಿದೆ. ಐದು ಕೋಟಿಗೂ ಹೆಚ್ಚು ಮತದಾರರನ್ನು ಒಳಗೊಂಡ ಈ ಪ್ರಕ್ರಿಯೆಯನ್ನು ನೀವು ಒಂದು ತಿಂಗಳಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ನೀವು ಅದನ್ನು ಆರು ತಿಂಗಳ ಮುಂಚಿತವಾಗಿ ಘೋಷಿಸಬೇಕಾಗಿತ್ತು" ಎಂದು ಅವರು ಹೇಳಿದರು.
ಇನ್ನು ಎಸ್ಐಆರ್ ಪ್ರಕ್ರಿಯೆ ವಿರುದ್ಧ ವಿವಿಧ ಸಂಘಟನೆಗಳ, ನಾಗರಿಕರು ಸಿದ್ಧಪಡಿಸಿದ ದೂರುಗಳ ಎಫ್ಐಆರ್ ಅನ್ನು ಬಿಡುಗಡೆ ಮಾಡಿದ ಪ್ರಕಾಶ್ ರಾಜ್ ಅವರು, ಒಂದು ತಿಂಗಳಲ್ಲಿ 1.08 ಕೋಟಿ ಮತದಾರರ ಹಕ್ಕು ಕಸಿದಿರುವುದು ಅಪರಾಧ. ಈ ಎಲ್ಲಾ ಮತದಾರರನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡುವವರೆಗೆ ಹೋರಟಾ ಮಾಡುವುದಾಗಿ ತಿಳಿಸಿದರು. ಇಡೀ ಪ್ರಕ್ರಿಯೆಯನ್ನು "ಅವೈಜ್ಞಾನಿಕ" ಮತ್ತು "ಪ್ರಜಾಪ್ರಭುತ್ವ ವಿರೋಧಿ" ರೀತಿಯಲ್ಲಿ ನಡೆಸಲಾಗಿದೆ ಎಂದು ಆರೋಪಿಸಿದ ಪ್ರಕಾಶ್ ರಾಜ್, ಈ ಸಂಬಂಧ ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.