Search


ರಾಜ್ಯಸಭಾ ಚುನಾವಣೆ; ನನ್ನ ಆಯ್ಕೆ ಮೋದಿ ಕೈಲಿದೆ ಎಂದ ದೇವೇಗೌಡ್ರು..!

ನವದೆಹಲಿ : ರಾಜ್ಯಸಭಾ ಚುನಾವಣೆಗೆ ಮೂಹರ್ತ ಫಿಕ್ಸ್‌ ಆಗಿದ್ದು. ರಾಜ್ಯದ 4 ಸ್ಥಾನಗಳನ್ನು ಸೇರಿಸಿ ಒಟ್ಟು 24 ಸ್ಥಾನಗಳಿಗೆ ಜೂನ್‌ 18ರಂದು ಮತದಾನ ನಡೆಯಲಿದೆ. ರಾಜ್ಯದ 4 ಸ್ಥಾನಗಳ ಪೈಕಿ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರ ಮರು ಆಯ್ಕೆ ಖಚಿತ ಎನ್ನಲಾಗುತ್ತಿದೆ. ಇದರ ಕುರಿತು ಮಾತನಾಡಿರುವ ಮಾಜಿ ಪ್ರಧಾನಿ ದೇವೇಗೌಡರು ನನ್ನ ಆಯ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕೈಯಲ್ಲಿದೆ ಎಂದು ಹೇಳಿದ್ದಾರೆ. 

ಜೂನ್‌ 25ಕ್ಕೆ ದೇವೇಗೌಡರ ರಾಜ್ಯಸಭಾ ಸದಸ್ಯತ್ವ ಅವಧಿ ಪೂರ್ಣಗೊಳ್ಳುತ್ತಿದ್ದು, ಅವರನ್ನು ಮತ್ತೊಂದು ಅವಧಿಗೆ ಮರು ಆಯ್ಕೆ ಮಾಡಲು ಜೆಡಿಎಸ್ ನಾಯಕರು ತೆರೆಮರೆಯ ಕಸರತ್ತು ಆರಂಭಿಸಿದ್ದಾರೆ. ದೆಹಲಿ ಮಟ್ಟದಲ್ಲಿ ಈಗಾಗಲೇ ಬಿಜೆಪಿ ಹೈಕಮಾಂಡ್ ನಾಯಕರೊಂದಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮೊದಲ ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. 

ಕಾಂಗ್ರೆಸ್‌ಗೆ 3 ಸ್ಥಾನ, ಎನ್‌ಡಿಐ ಮೈತ್ರಿಗೆ 1 ಸ್ಥಾನ..!

ನಾಲ್ಕು ರಾಜ್ಯಸಭಾ ಸ್ಥಾನಗಳ ಪೈಕಿ ಒಬ್ಬ ಅಭ್ಯರ್ಥಿ ಗೆಲ್ಲಲು ಕನಿಷ್ಠ 45 ರಿಂದ 46 ಮತಗಳ ಅಗತ್ಯವಿದೆ. ಪ್ರಸ್ತುತ ವಿಧಾನಸಭೆಯಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಹೊಂದಿದ್ದು, ಮೂರು ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದು. ಇನ್ನುಳಿದಂತೆ ಬಿಜೆಪಿ (63) ಮತ್ತು ಜೆಡಿಎಸ್ (18) ಮೈತ್ರಿಕೂಟದ ಬಳಿ ಒಟ್ಟು 81 ಮತಗಳಿದ್ದು, ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡರನ್ನು ಕಣಕ್ಕಿಳಿಸಿದರೆ ಅವರ ಗೆಲುವು ನಿಶ್ಚಿತವಾಗಿದೆ. ಗೌಡರ ಹಿರಿತನ ಮತ್ತು ರಾಜಕೀಯ ಅನುಭವಕ್ಕೆ ಮನ್ನಣೆ ನೀಡಿ ಹೈಕಮಾಂಡ್ ಒಪ್ಪಿಗೆ ನೀಡುವ ವಿಶ್ವಾಸದಲ್ಲಿ ದಳಪತಿಗಳಿದ್ದಾರೆ. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೂಡ, ನಾವು ಯಾವುದೇ ಷರತ್ತು ಅಥವಾ ಒತ್ತಡ ಹೇರಿಲ್ಲ, ಪ್ರಧಾನಿ ಮೋದಿ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದಿದ್ದಾರೆ.

ಇನ್ನು ತಮ್ಮ ಮರು ಆಯ್ಕೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ದೇವೇಗೌಡರು, ನಾನು ಸಾಮಾನ್ಯ ರೈತ ಕುಟುಂಬದಿಂದ ಬಂದು ದೇಶದ ಪ್ರಧಾನಿ ಹುದ್ದೆಯವರೆಗೆ ನೋಡಿದ್ದೇನೆ. ರಾಜ್ಯಸಭೆಯ ಅವಧಿ ಮುಗಿಯುತ್ತಿದ್ದು, ಉಳಿದದ್ದು ಪ್ರಧಾನಿ ನರೇಂದ್ರ ಮೋದಿ ಅವರ ವಿವೇಚನೆಗೆ ಬಿಟ್ಟದ್ದು. ನಾನು ಅಧಿಕಾರದಲ್ಲಿ ಇರಲಿ, ಬಿಡಲಿ ಕೊನೆಯ ಉಸಿರಿರುವವರೆಗೂ ಜನಗಳ ಪರವಾಗಿ ಹೋರಾಟ ಮಾಡುತ್ತೇನೆ. ವಯಸ್ಸಾಗಿದೆ ಎಂದು ಮನೆಯಲ್ಲಿ ಕೂರುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
 

By News Desk - 23-05-2026


Ads in Post