ನವದೆಹಲಿ: ದೇಶದಲ್ಲಿ ಸಕ್ಕರೆ ಬೆಲೆ ಏರಿಕೆಗೆ ಎಥೆನಾಲ್ ಉತ್ಪಾದನೆಗಾಗಿ ಸಕ್ಕರೆಯನ್ನು ಬೇರೆಡೆಗೆ ತಿರುಗಿಸುತ್ತಿರುವುದೇ ಕಾರಣ ಎಂಬ ಆರೋಪವನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಸಕ್ಕರೆ ಬೆಲೆ ಏರಿಕೆಗೆ ದೇಶೀಯ ಉತ್ಪಾದನೆ ಕುಸಿತ, ಹಬ್ಬದ ಋತುವಿನ ಬೇಡಿಕೆ ಹೆಚ್ಚಳ ಹಾಗೂ ಕೆಲ ಉದ್ಯಮ ವಲಯಗಳಲ್ಲಿ ದಾಸ್ತಾನು ಮಾಡಿರುವುದು ಪ್ರಮುಖ ಕಾರಣ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಜುಲೈ 20ರಂದು ಕೆಜಿಗೆ ₹48.18 ಇದ್ದ ಚಿಲ್ಲರೆ ಸಕ್ಕರೆ ಬೆಲೆ ಆಗಸ್ಟ್ 20ರಂದು ₹55.70ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಸ್ಪಷ್ಟನೆ ನೀಡಿದೆ. ಸರ್ಕಾರದ ಪ್ರಕಾರ, 2025-26ನೇ ಸಕ್ಕರೆ ಋತುವಿನಲ್ಲಿ ಎಥೆನಾಲ್ ಉತ್ಪಾದನೆಗೆ ಬೇರೆಡೆಗೆ ತಿರುಗಿಸಲಾದ ಸಕ್ಕರೆಯ ಪ್ರಮಾಣ ಸುಮಾರು 9%ಕ್ಕೆ ಇಳಿದಿದೆ. ಅಲ್ಲದೆ, ದೇಶದ ಎಥೆನಾಲ್ ಉತ್ಪಾದನೆಯ ಬಹುಪಾಲು ಇದೀಗ ಧಾನ್ಯಗಳಿಂದ, ವಿಶೇಷವಾಗಿ ಮೆಕ್ಕೆಜೋಳದಿಂದ ಬರುತ್ತಿದೆ ಎಂದು ತಿಳಿಸಿದೆ.
ಸಕ್ಕರೆ ಬೆಲೆ ಏರಿಕೆ ನಿಯಂತ್ರಿಸಲು ನವೆಂಬರ್ 30ರವರೆಗೆ ದೇಶಾದ್ಯಂತ ಸಕ್ಕರೆ ವ್ಯಾಪಾರಿಗಳ ದಾಸ್ತಾನು ಮಿತಿಯನ್ನು 400 ಟನ್ಗಳಿಗೆ ನಿಗದಿಪಡಿಸಲಾಗಿದೆ. ಸೆಪ್ಟೆಂಬರ್ 1ರಿಂದ ಬೃಹತ್ ಗ್ರಾಹಕರು 15 ದಿನಗಳ ಬಳಕೆಗೆ ಅಗತ್ಯವಿರುವ ಪ್ರಮಾಣಕ್ಕಿಂತ ಹೆಚ್ಚಿನ ಸಕ್ಕರೆ ದಾಸ್ತಾನು ಇಡುವುದಕ್ಕೂ ನಿರ್ಬಂಧ ವಿಧಿಸಲಾಗಿದೆ.
ಇದರ ಜೊತೆಗೆ 10 ಲಕ್ಷ ಟನ್ ಕಚ್ಚಾ ಸಕ್ಕರೆಯನ್ನು ಸುಂಕ ರಹಿತವಾಗಿ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕೃತಕ ಕೊರತೆ ಹಾಗೂ ಅಕ್ರಮ ದಾಸ್ತಾನು ತಡೆಯಲು ಸಕ್ಕರೆ ಕಾರ್ಖಾನೆಗಳಲ್ಲಿರುವ ದಾಸ್ತಾನುಗಳ ಭೌತಿಕ ಪರಿಶೀಲನೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ತಂಡಗಳಿಗೆ ಸೂಚನೆ ನೀಡಲಾಗಿದೆ. ಸಕ್ಕರೆ ಉತ್ಪಾದನೆ ನಿರೀಕ್ಷೆಗಿಂತ ಕಡಿಮೆಯಾಗಿರುವುದು, ಹವಾಮಾನದಿಂದ ಕಬ್ಬು ಬೆಳೆ ಹಾನಿಯಾಗಿರುವುದು ಹಾಗೂ ಜಾಗತಿಕ ಪೂರೈಕೆ ಬಿಗಿಯಾಗಿರುವುದೂ ಬೆಲೆ ಏರಿಕೆಗೆ ಕಾರಣಗಳಾಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.