ನವದೆಹಲಿ: ರಾಮಮಂದಿರ ದೇಣಿಗೆ (Ram Mandir Donation) ಕಳ್ಳತನ ಪ್ರಕರಣದ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ. ಸದ್ಯ ಸುಪ್ರೀಂ ಕೋರ್ಟ್ ಬೇಸಿಗೆ ರಜೆಯ ಬಳಿಕ ನಿಯಮಿತ ಪೀಠದ ಮುಂದೆ ಪಟ್ಟಿ ಮಾಡುವಂತೆ ನಿರ್ದೇಶನ ನೀಡಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ವೀಕರಿಸಿದ ದೇಣಿಗೆಗಳ ದುರುಪಯೋಗದ ಆರೋಪದ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ತುರ್ತು ವಿಚಾರಣೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಸುಪ್ರೀಂ ಮೇಲ್ವಿಚಾರಣೆಯಲ್ಲಿ ಕೇಂದ್ರ ತನಿಖಾ ದಳದ (CBI) ವಿಶೇಷ ತನಿಖಾ ತಂಡ (SIT) ತನಿಖೆ ನಡೆಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು. ಆದರೆ ನ್ಯಾಯಮೂರ್ತಿಗಳಾದ ಎಂ.ಎಂ.ಸುಂದ್ರೇಶ್ ಮತ್ತು ಶೀಲ್ ನಾಗು ಅವರ ರಜಾ ರಾಮ ಮಂದಿರದ ದೇಣಿಗೆ ವಿಷಯದಲ್ಲಿ ನಡೆದಿರುವ ಅವ್ಯವಹಾರದ ಕುರಿತು ತುರ್ತು ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಆಭಿಪ್ರಾಯಪಟ್ಟಿದೆ.
ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು, ಯಾವುದೇ ಪ್ರಭಾವಕ್ಕೆ ಒಳಗಾಗಬಾರದು. ಭಕ್ತರು ನೀಡಿದ ದಾನ, ದೇಣಿಗೆ, ಆಸ್ತಿಗಳ ರಕ್ಷಣೆಯಾಗಬೇಕು. ರಕ್ಷಣೆ ಸಂಪೂರ್ಣ ಪಾರದರ್ಶಕತೆಯಿಂದ ಇರಬೇಕು. ಟ್ರಸ್ಟ್ ಮೇಲೆ ಅಪನಂಬಿಕೆ ಇರುವ ಸಮಯದಲ್ಲಿ ಲಕ್ಷಾಂತರ ಭಕ್ತರ ನಂಬಿಕೆ ಪುನಃಸ್ಥಾಪನೆ ಮಾಡಬೇಕಿದೆ. ಎಸ್ಐಟಿ ರಚನೆಯಾದರೂ ಎಫ್ಐಆರ್ ವಿಳಂಬವಾಗಿದೆ, ಎಣಿಕೆ ಕಾರ್ಯದಲ್ಲಿದ್ದ ಸದಸ್ಯರು ಅಪಾರ ಪ್ರಮಾಣ ಆಸ್ತಿ ಖರೀದಿಸಿದ್ದಾರೆ. ಈ ಹಿನ್ನಲೆ ತನಿಖೆಯನ್ನು ಸಿಬಿಐಗೆ ನೀಡಬೇಕು ಎಂದೂ ಕೋರಲಾಗಿತ್ತು. ಆದಾಗ್ಯೂ ಕೋರ್ಟ್ ತುರ್ತು ವಿಚಾರಣೆ ನಡೆಸಲು ನಿರಾಕರಿಸಿತು.
ಪ್ರಕರಣದ ಪ್ರಸ್ತಾಪದ ಸಮಯದಲ್ಲಿ, ಏನು ಅರ್ಜೆಂಟು? ಎಂದು ಪ್ರಶ್ನಿಸಿದ ಪೀಠವು, ತಕ್ಷಣದ ಹಸ್ತಕ್ಷೇಪಗಳ ಅಗತ್ಯತೆಗಳನ್ನು ಪ್ರಶ್ನಿಸಿತು. ಸದ್ಯ ಸುಪ್ರೀಂ ಕೋರ್ಟ್ ಬೇಸಿಗೆ ರಜೆಯಲ್ಲಿದ್ದು, ಕಾರ್ಯನಿರ್ವಹಿಸಲು ಪ್ರಾರಂಭಿಸಿದ ನಂತರ ಅರ್ಜಿಯನ್ನ ಪಟ್ಟಿ ಮಾಡುವಂತೆ ಸೂಚಿಸಿತು. ಜುಲೈ 13 ರಿಂದ ಸಾಮಾನ್ಯ ವಿಚಾರಣೆ ಆರಂಭವಾಗಲಿದೆ.