ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ನಡೆದಿದ್ದ 6 ವರ್ಷದ ಬಾಲಕಿಯ ಅನುಮಾನಸ್ಪದ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಹೆತ್ತ ತಾಯಿ ಮತ್ತು ಆಕೆಯ ಪ್ರಿಯಕರನೇ ಸೇರಿಕೊಂಡು ಕೊಲೆ ಮಾಡಿರುವ ಅನುಮಾನವನ್ನ ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಕುರಿತು ತನಿಖೆಯನ್ನು ಕೈಗೊಂಡಿದ್ದಾರೆ.
ಕಾಡುಗೋಡಿಯಲ್ಲಿ ಕಳೆದ ಮಾರ್ಚ್ 24ರಂದು 6 ವರ್ಷದ ವೆನ್ನಿಲಾ ಎಂಬ ಬಾಲಕಿ ಅನುಮಾನಸ್ಪದವಾಗಿ ಸಾವನ್ನಪ್ಪಿತ್ತು. ಈ ಪ್ರಕರಣದ ತನಿಖೆಗೆ ಇಳಿದ ಪೊಲೀಸರಿಗೆ ಆರಂಭದಲ್ಲಿ ಇದೊಂದು ಸಹಜ ಸಾವನಿಸಿದರು, ನಂತರದಲ್ಲಿ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಹೆತ್ತ ತಾಯಿಯೇ ಮಗಳನ್ನ ಕೊಲೆ ಮಾಡಿ, ನಂತರ ಬಿರಿಯಾನಿ ತಿಂದು ಮಗು ಸಾವನ್ನಪ್ಪಿದೆ ಎಂದು ಕಥೆ ಕಟ್ಟಿದ್ದಳು ಎಂಬುದು ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿದೆ.
ಬಿರಿಯಾನಿ ತಿಂದು ಮಗು ಸಾವನ್ನಪ್ಪಿದೆ ಎಂದಿದ್ದ ತಾಯಿ...!
ಕಳೆದ ಮಾರ್ಚ್ 24ರಂದು ಇದ್ದಕ್ಕಿದ್ದಂತೆ ವೆನ್ನಿಲಾ ಮೃತಪಟ್ಟಿರುತ್ತಾಳೆ. ಇದರ ಬಗ್ಗೆ ಮಗುವಿನ ತಾಯಿ ಪ್ರಿಯಾಂಕಾಳನ್ನ ವಿಚಾರಿಸಿದಾಗ, ಬರ್ತಡೇಗಾಗಿ ಕೋಲಾರ ಬಳಿಯ ಕೆಫೆಗೆ ಹೋಗಿದ್ವಿ, ಆಗ ಮಗುವಿಗೆ ಕೇಕ್, ಬಿರಿಯಾನಿ ತಿನ್ನಿಸಿ ಕಾರಿನಲ್ಲಿ ಮಲಗಿಸಿದ್ದಿ, ಬೆಳಗ್ಗೆ ನೋಡುವಷ್ಟರಲ್ಲಿ ಸಾವನ್ನಪ್ಪಿದೆ ಎಂದು ಹೇಳಿದ್ದಳು. ತಾಯಿ ಪ್ರಿಯಾಂಕಾಳ ಬಗೆಬಗೆ ಹೇಳಿಕೆಯಿಂದ ಅನುಮಾನಗೊಂಡ ಕಾಡುಗೊಡಿ ಪೊಲೀಸರು ವೆನ್ನಿಳಾ ಮೃತದೇಹವನ್ನು ಮರಣೋತ್ತರ ಪರೀಕ್ಷಗೆ ಒಳಪಡಿಸಿದ್ದರು. ಮೂರು ತಿಂಗಳ ಬಳಿಕ ಬಂದ ಪೋಸ್ಟ್ ಮಾರ್ಟಂ ವರದಿಯಲ್ಲಿ ಹೊಡೆದು ಸಾಯಿಸಿದ ಅಂಶ ಬಯಲಾಗಿತ್ತು.
ಪ್ರಿಯಕರನೊಂದಿಗೆ ಪ್ರೀತಿ..!
ಆರೋಪಿ ಪ್ರಿಯಾಂಕಾಳ ಮತ್ತೊಂದು ಮುಖವಾಡ ಬಯಲಾಗಿದ್ದು, ಆಕೆಗೆ ಐಷಾರಾಮಿ ಜೀವನ ನಡೆಸಬೇಕು ಅನ್ನೋ ಆಸೆ ಇತ್ತು. ಬಾಲಕಿ ತಾಯಿ ಪ್ರಿಯಾಂಕಾ, ಆಕೆಯ ಪ್ರಿಯಕರ ಮೋಹನ್ ನಡುವೆ ಪ್ರೀತಿಯಾಗಿ, ಅವರಿಬ್ಬರು ಕಾಶಿಯಲ್ಲಿ ಯಾರಿಗೂ ತಿಳಿಯದಂತೆ ಮದುವೆಯಾಗಿದ್ದರು. ಇದು ಮುಂದುವರೆದು ಮಗು ಮಾಡಿಕೊಳ್ಳಲು ನಿರ್ಧಾರ ಮಾಡಿದ್ದರು.
ಆದರೆ ಇದಕ್ಕೆ ಜೊತೆಗಿದ್ದ ಪ್ರಿಯಾಂಕಾಳ ಮಗಳು ಆರು ವರ್ಷದ ವೆನ್ನಿಲಾ ಅಡ್ಡಿಯಾಗುತ್ತಾಳೆ ಎಂಬ ಕಾರಣಕ್ಕೆ ಮಗುವನ್ನು ಕತ್ತುಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಆರೋಪಿ ಪ್ರಿಯಾಂಕಾಗೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ಬಳಿ ಐವತ್ತು ಎಕರೆ ಜಮೀನು ಇದ್ದು, ಆಸ್ತಿ ವಿಚಾರಕ್ಕೂ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಪ್ರಕರಣ ಹೊರಗೆ ಬರುತ್ತಿದ್ದಂತೆ, ಪ್ರಿಯಕರ ಮೋಹನ್ನನ್ನು ಕಾಡುಗೋಡಿ ಪೊಲೀಸರು ಬಂಧನ ಮಾಡಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಗು ವೆನ್ನಿಲಾ ಸಾವನ್ನಪ್ಪಿದ ದಿನ ಧರಿಸಿದ್ದ ಬಟ್ಟೆ, ಅವತ್ತು ನೀವು ಯಾವ ಬಟ್ಟೆ ಧರಿಸಿದ್ರಿ, ಆ ಬಟ್ಟೆಗಳನ್ನು ನೀಡುವಂತೆ ಪೊಲೀಸರು ಕೇಳಿದ್ದಾರೆ. ಆದರೆ ಪ್ರಿಯಕರ ಮೋಹನ್ ಮಗು ಮತ್ತು ತಾನು ಧರಿಸಿದ್ದ ಬಟ್ಟೆಗಳನ್ನು ಚೇಂಜ್ ಮಾಡಿ ಕೊಟ್ಟಿರೋದು ಪೊಲೀಸರ ಸಿಸಿಟಿವಿ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಇನ್ನು ಮಗುವಿನ ಅಮ್ಮ ಪ್ರಿಯಾಂಕಾ ಕೇಸ್ ದಾಖಲಾದ ಮರುಕ್ಷಣವೇ ನಾಪತ್ತೆಯಾಗಿದ್ದಾರೆ.