ಮಡಿಕೇರಿ : ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ಕಾದಾಟದ ವೇಳೆ ಮಹಿಳೆಯೊಬ್ಬರು ಆನೆಗಳ ನಡುವೆ ಸಿಲುಕಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಮಹಿಳೆಯನ್ನು 33 ವರ್ಷದ ಜಿನ್ಶು ಎಂದು ಗುರುತಿಸಲಾಗಿದೆ.
ಸಾವು ಎಂಬುದು ಎಲ್ಲಿ, ಹೇಗೆ ಬರುತ್ತದೆ ಎಂಬುದನ್ನ ಬಲ್ಲವರು ಯಾರು ಇಲ್ಲ, ಅದೇ ರೀತಿ ಇಲ್ಲೊಬ್ಬ ಮಹಿಳೆ ಕುಟುಂಬ ಸಮೇತ ಚೆನೈನಿಂದ ಮಡಿಕೇರಿಗೆ ಪ್ರವಾಸಕ್ಕೆಂದು ಬಂದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೊಡಗು ಜಿಲ್ಲೆಯ, ಕುಶಾಲನಗರ ತಾಲ್ಲೂಕಿನ ದುಬಾರೆ ಆನೆ ಶಿಬಿರಕ್ಕೆ ಜಿನ್ಶು ಕುಟುಂಬ ಸಮೇತ ಬಂದಿದ್ದರು. ಅವರು ಕಾವೇರಿ ನೀರಲ್ಲಿ ಆಟವಾಡುತ್ತಿರುವ ಸಂದರ್ಭ ಮಾವುತರು ಆನೆಗಳನ್ನು ಸ್ನಾನಕ್ಕೆಂದು ಕರೆತಂದಿದ್ದರು.
ಈ ವೇಳೆ ಆನೆಗಳ ನಡುವೆ ಕಾದಾಟ ಶುರುವಾಗಿದೆ. ಈ ವೇಳೆ ಒಂದು ಆನೆ ತನ್ನ ದಂತದಿಂದ ಮತ್ತೊಂದು ಆನೆಗೆ ತಿವಿದಿದ್ದು. ಈ ವೇಳೆ ತಿವಿತಕ್ಕೆ ಒಳಗಾದ ಆನೆ ಅಲ್ಲೇ ಪಕ್ಕದಲ್ಲಿ ಆಟವಾಡುತ್ತಿದ್ದ ಮಹಿಳೆ ಮೇಲೆ ಬಿದ್ದಿದೆ. ಆನೆ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನ ಕೂಡಲೇ ಕುಶಾಲನಗರ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.
ರಕ್ಷಣೆಗೆ ಹರಸಾಹಸ
ಆನೆಗಳ ಕಾದಾಟದ ವೇಳೆ ಅವುಗಳ ಕಾಲಿನ ಸಮೀಪ ಸಿಲುಕಿಕೊಂಡಿದ್ದ ಮಹಿಳೆ ಜಿನ್ಶು ರಕ್ಷಣೆಗೆ ಶಕ್ತಿಮೀರಿ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಆನೆಗಳ ನಿಯಂತ್ರಣಕ್ಕೆ ಮಾವುತರು ಸತತ ಪ್ರಯತ್ನ ನಡೆಸಿರುವ. ಅಲ್ಲೇ ಇದ್ದ ಕೆಲವರು ಮಹಿಳೆಯ ರಕ್ಷಣೆಗೆ ಯತ್ನಿಸಿದರಾದರೂ ಅದು ಫಲಪ್ರದವಾಗಿಲ್ಲ. ಅಲ್ಲೇ ಇದ್ದ ಇನ್ನು ಕೆಲ ಪ್ರವಾಸಿಗರು ಆನೆಗಳ ಕಾದಾಟಕ್ಕೆ ಬೆದರಿ ಕಾಲ್ಕಿತ್ತು ಓಡಿದ್ದು, ಅದೃಷ್ಟವಶಾತ್ ಎಂಬಂತೆ ಅವರೆಲ್ಲ ಬಚಾವ್ ಆಗಿದ್ದಾರೆ. ಆದರೆ ಪ್ರವಾಸಕ್ಕೆಂದು ಬಂದಿದ್ದ ಅಮಾಯಕ ಮಹಿಳೆಯ ಜೀವವನ್ನು ಸಾಕಾನೆಗಳು ಬಲಿ ಪಡೆದಿವೆ. ಘಟನೆ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.