ತಿರುಪತಿ: ಕರ್ನಾಟಕದ 116 ವರ್ಷದ ವೃದ್ದೆಯೊಬ್ಬರು ತಿರುಪತಿಯ ತಿರುಮಲ ದೇವಾಲಯದ 3550 ಬೆಟ್ಟ ಏರಿ ದೇವರ ದರ್ಶನ ಪಡೆದಿದ್ದಾರೆ. ಇಳಿ ವಯಸ್ಸಿನಲ್ಲೂ ವೃದ್ದೆಯ ಭಕ್ತಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗೆ ಕಾರಣವಾಗಿದ್ದು. ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು (Chandrababu Naidu) ಅವರು ಎಕ್ಸ್ (X) ನಲ್ಲಿ ಪೋಸ್ಟ್ ಮಾಡುವ ಮೂಲಕ ಅವರನ್ನು ಹಾಡಿಹೊಗಳಿದ್ದಾರೆ.
ಕರ್ನಾಟಕದ 116 ವರ್ಷದ ನವನೀತಮ್ಮ (Tirumala) ಕಾಲ್ನಡಿಗೆಯಲ್ಲೇ ತಿರುಮಲ ಬೆಟ್ಟ ಏರಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ. ಕುಟುಂಬದ ಸದಸ್ಯರೊಂದಿಗೆ ನವನೀತಮ್ಮ ತಿರುಮಲದ ಮೆಟ್ಟಿಲುಗಳನ್ನು ಏರಿ ಸ್ವಾಮಿಯ ದರ್ಶನ ಪಡೆದಿದ್ದಾರೆ. ವಯಸ್ಸು ಎಷ್ಟೇ ಆಗಿದ್ದರೂ ಭಕ್ತಿ ಮತ್ತು ದೃಢಸಂಕಲ್ಪ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ವೃದ್ಧೆ ಮೆಟ್ಟಿಲೇರುತ್ತಿರುವ ವಿಡಿಯೋ ನೋಡಿ ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕೂಡ ನವನೀತಮ್ಮ ಅವರ ಯಾತ್ರೆಯನ್ನು ಶ್ಲಾಘಿಸಿದ್ದಾರೆ. “ಶುದ್ಧ ಭಕ್ತಿಗೆ ವಯಸ್ಸು ಅಡ್ಡಿಯಾಗುವುದಿಲ್ಲ. ಕರ್ನಾಟಕದ 116 ವರ್ಷದ ಅಜ್ಜಿ ಕಾಲ್ನಡಿಗೆಯಲ್ಲೇ ತಿರುಮಲ ತಲುಪಿ ಸ್ವಾಮಿಯ ದರ್ಶನ ಪಡೆದಿದ್ದಾರೆ. ಅವರ ಭಕ್ತಿಗೆ ಮತ್ತು ಅವರಿಗೆ ಬೆಂಬಲವಾಗಿ ನಿಂತ ಕುಟುಂಬಕ್ಕೂ ಅಭಿನಂದನೆಗಳು. ಇದು ನಿಜಕ್ಕೂ ಸ್ಪೂರ್ತಿದಾಯಕ ಎಂದು ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.