ಬೆಂಗಳೂರು: ಕಾಡುಗೋಡಿ (Kadugodi) ಠಾಣಾ ವ್ಯಾಪ್ತಿಯ ವೆನ್ನಿಲಾ ಕೊಲೆ ಪ್ರಕರಣದಲ್ಲಿ ದೊಡ್ಡ ಬೆಳವಣಿಗೆಯಾಗಿದೆ. ಪ್ರಕರಣದ ಆರೋಪಿ ಮೋಹನ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು. ಮಗು ಐಸ್ಕ್ರೀಂ ಬೇಕೆಂದು ಹಠ ಮಾಡಿದಕ್ಕೆ ಆಕೆಯ ಹೊಟ್ಟೆಗೆ ಬಲವಾಗಿ ಒದ್ದು, ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಐಸ್ಕ್ರೀಂಗಾಗಿ ಮಗು ಹಠ..ಅಷ್ಟಕ್ಕೇ ಕೊಲೆ ಮಾಡಿದ ನೀಚ..!
ಪೊಲೀಸ್ ತನಿಖೆ ವೇಳೆ ಆರೋಪಿ ಮೋಹನ್ ನೀಡಿದ ಹೇಳಿಕೆ ಅಧಿಕಾರಿಗಳನ್ನೇ ಬೆಚ್ಚಿಬೀಳಿಸಿದೆ. ಮಾರ್ಚ್ 21ರಂದು ಪ್ರಿಯಾಂಕಾ ಮತ್ತು ಮೋಹನ್ ಮಧುರೈಗೆ ಮೂರು ದಿನಗಳ ದೇವಸ್ಥಾನ ಪ್ರವಾಸಕ್ಕೆ ತೆರಳಿದ್ದರು. ಮಾರ್ಚ್ 24 ರಂದು ಬೆಂಗಳೂರಿಗೆ ವಾಪಸ್ ಬಂದಿದ್ದರು. ಅದೇ ದಿನ ರಾತ್ರಿ ಇಂದಿರಾನಗರದಲ್ಲಿ ಶಾಪಿಂಗ್ಗೆ ತೆರಳಿದ್ದ ವೇಳೆ ಘಟನೆ ನಡೆದಿರುವುದಾಗಿ ಆರೋಪಿ ಮೋಹನ್ ಹೇಳಿದ್ದಾನೆ.
ಪ್ರಿಯಾಂಕಾ ಶಾಪಿಂಗ್ ಹೋದ ವೇಳೆ ಕಾರಿನಲ್ಲಿದ್ದ ಮೋಹನ್ ಬಳಿ ಬಾಲಕಿ ಐಸ್ಕ್ರೀಂ ಬೇಕೆಂದು ಕೇಳಿದ್ದಳು. ಮೋಹನ್ ಐಸ್ಕ್ರೀಂ ತಂದುಕೊಟ್ಟಿದ್ದ. ಆದರೆ ಬೇರೆ ಐಸ್ಕ್ರೀಂ ಬೇಕೆಂದು ಮಗು ಅಳಲು ಆರಂಭಿಸಿತ್ತು. ಇದರಿಂದ ಕೋಪಗೊಂಡ ಮೋಹನ್ ಮಗುವಿನ ಹೊಟ್ಟೆಕ್ಕೆ ಬಲವಾಗಿ ಒದ್ದಿದ್ದಾನೆ. ನೋವಿನಿಂದ ಮಗು ಜೋರಾಗಿ ಕಿರುಚಾಡಿದೆ. ಈ ವೇಳೆ ಬಾಯಿಯನ್ನು ಎರಡೂ ಕೈಗಳಿಂದ ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಘಟನೆ ನಡೆದ ಬಳಿಕ ಶಾಪಿಂಗ್ ಮುಗಿಸಿ ಬಂದ ಪ್ರಿಯಾಂಕಾಗೆ ನಡೆದ ವಿಚಾರವನ್ನು ಮೋಹನ್ ತಿಳಿಸಿದ್ದಾನೆ. ಬಳಿಕ ಇಬ್ಬರೂ ಸೇರಿ ಪ್ರಕರಣ ಮುಚ್ಚಿಹಾಕಲು ಸಂಚು ರೂಪಿಸಿದ್ದಾರೆ. ಮಗು ಮಲಗಿರುವಂತೆ ಭುಜದ ಮೇಲೆ ಹೊತ್ತು ಕಾಡುಗೋಡಿಯ ವಿಲ್ಲಾಗೆ ಕರೆದುಕೊಂಡು ಹೋಗಿದ್ದಾರೆ. ರಾತ್ರಿ ಪೂರ್ತಿ ಮಗುವಿನ ಮೃತದೇಹವನ್ನು ಮನೆಯಲ್ಲೇ ಇಟ್ಟಿದ್ದಾರೆ. ಮರುದಿನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಮಗು ಮೆಟ್ಟಿಲಿನಿಂದ ಬಿದ್ದಿತ್ತು. ನಾವು ಆಕೆಯನ್ನು ಮಲಗಿಸಿದ್ದೆವು ಎಂದು ಕಥೆ ಕಟ್ಟಿದ್ದಾರೆ. ಆದರೆ, ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಆಗ ಪ್ರಿಯಾಂಕಾ ಆಸ್ಪತ್ರೆಯಲ್ಲಿ ಗೋಳಾಡಿ ಹೈಡ್ರಾಮಾ ಮಾಡಿದ್ದಾಳೆ