ಬೆಂಗಳೂರು: ಪರಿಷತ್ ಚುನಾವಣೆಯಲ್ಲಿ ಸ್ವಪಕ್ಷೀಯರಿಂದ ಆಗಿರುವ ಅಡ್ಡ ಮತದಾನದ ಬಗ್ಗೆ, ಸ್ಪಷ್ಟನೆ ನೀಡಲು ದೆಹಲಿಗೆ ತೆರಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಅವರು ಬಿಜೆಪಿ ಅಧ್ಯಕ್ಷ ನಿತಿನ್ ನಬೀನ್ (Nitin Nabin) ಅವರ ಮುಂದೆ ತಮ್ಮ ನಿರ್ಲಕ್ಷದಿಂದ ಆಗಿರುವ ತಪ್ಪನ್ನ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಈ ರೀತಿ ಮಾಡಿರುವ ಶಾಸಕರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಮೇಲ್ಮನೆ ಚುನಾವಣೆಯಲ್ಲಿ ಅಡ್ಡ ಮತದಾನದಿಂದ ತೀವ್ರ ಮುಜುಗರಕ್ಕೆ ಒಳಗಾಗಿರೋ ರಾಜ್ಯ ಬಿಜೆಪಿ (BJP) ನಾಯಕರು ಹೈಕಮಾಂಡ್ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಬಿಜೆಪಿ ಅಧ್ಯಕ್ಷ ನಿತಿನ್ ನಬೀನ್ (Nitin Nabin), ರಾಜ್ಯ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯ ನಾಯಕರ ನಿರ್ಲಕ್ಷ್ಯದಿಂದಲೇ ಅಡ್ಡ ಮತದಾನವಾಗಿದ್ದು, ಯಾರನ್ನೂ ಬಿಡಲ್ಲ ಅಂತ ಎಚ್ಚರಿಕೆ ಕೊಟ್ಟಿದ್ದಾರೆ.
ಈ ವೇಳೆ, ಆಗಿರೋ ತಪ್ಪನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಅಶೋಕ್ ಒಪ್ಪಿಕೊಂಡಿದ್ದಾರೆ. 4 ರಿಂದ 7 ಶಾಸಕರು ಅಡ್ಡ ಮತದಾನ ಮಾಡಿರೋ ಸಾಧ್ಯತೆಗಳಿದ್ದು, 9 ಸಂಶಯಾಸ್ಪದ ಶಾಸಕರ ಪಟ್ಟಿಯನ್ನು ಹೈಕಮಾಂಡ್ಗೆ ನೀಡಿದ್ದಾರೆ. ಸತ್ಯಶೋಧನಾ ಸಮಿತಿಯ ವರದಿ ಬರಲಿ. ಮುಂದೆ ನಾವು ತೀರ್ಮಾನ ಮಾಡ್ತೇವೆ ಅಂತ ರಾಜ್ಯ ಬಿಜೆಪಿ ನಾಯಕರಿಗೆ ಹೇಳಿ ಕಳುಹಿಸಿದ್ದಾರೆ.
ಧರ್ಮಸ್ಥಳ ಆಣೆ ಪ್ರಮಾಣಕ್ಕೆ ಬ್ರೇಕ್..!
ಧರ್ಮಸ್ಥಳದಲ್ಲಿನ ಆಣೆ ಪ್ರಮಾಣಕ್ಕೆ ಹೈಕಮಾಂಡ್ ಗರಂ ಆಗಿದೆ. ನಿಮ್ಮ ತಪ್ಪಿಂದ ಅಡ್ಡಮತದಾನವಾಗಿದ್ದು, ಧರ್ಮಸ್ಥಳವನ್ನು ಎಳೆದು ತರೋದು ಬೇಡ ಅಂತ ಸಿಟ್ಟಾಗಿದ್ದಾರೆ. ಹೈಕಮಾಂಡ್ ವಾರ್ನಿಂಗ್ ಬಳಿಕ ಆಣೆ ಪ್ರಮಾಣ ನಿರ್ಧಾರದಿಂದ ರಾಜ್ಯ ನಾಯಕರು ಹಿಂದೆ ಸರಿದಿದ್ದಾರೆ. ಈ ಮಧ್ಯೆ, ಸಿ.ಟಿ.ರವಿ ನೇತೃತ್ವದ ಸತ್ಯಶೋಧನಾ ಸಮಿತಿ ಎಲ್ಲ ಶಾಸಕರ ಬಳಿ ಮಾಹಿತಿ ಸಂಗ್ರಹಿಸಿದ್ದು, ನಾಳೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ವರದಿ ನೀಡೋ ಸಾಧ್ಯತೆಗಳಿವೆ.