ನವದೆಹಲಿ : ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಮೂಲಕ ನರೇಂದ್ರ ಮೋದಿ ಸರ್ಕಾರವನ್ನ ಉರುಳಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ, ರಾಹುಲ್ ಗಾಂಧಿಗೆ ವಿದೇಶಿ ಶಕ್ತಿಗಳು ನೆರವು ನೀಡುತ್ತಿದ್ದು, ಈ ಟೂಲ್ಕಿಟ್ ಗ್ಯಾಂಗ್ ಬಳಸಿಕೊಂಡು ದೇಶದಲ್ಲಿ ಪಿತೂರಿ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಆರೋಪಿಸಿದ್ದಾರೆ.
ಕಳೆದ ಮಂಗಳವಾರ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ " ಇನ್ನು ಒಂದು ವರ್ಷದಲ್ಲಿ ಮೋದಿ ಸರ್ಕಾರ ಪತನವಾಗುತ್ತದೆ" ಎಂದು ಹೇಳಿದ್ದರು. ಇದನ್ನೇ ಆಯುಧವಾಗಿ ತೆಗೆದುಕೊಂಡಿರುವ ಬಿಜೆಪಿಗರು " ರಾಹುಲ್ ಗಾಂಧಿ ತಮ್ಮ "ಯೋಜನೆಯನ್ನ" ಬಹಿರಂಗ ಪಡಿಸಿದ್ದಾರೆ. ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಪಿಯೂಷ್ ಗೋಯಲ್ ಎಕ್ಷ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದೊಂದು ಟೂಲ್ಕಿಟ್ ಗ್ಯಾಂಗ್ ಎಂದು ವರ್ಣಿಸಿರುವ ಗೋಯಲ್, ಇವರು ಭಾರತವನ್ನ ಅಸ್ಥಿರಗೊಳಿಸುವ ಕನಸನ್ನ ಹೊಂದಿದ್ದಾರೆ, ರಾಹುಲ್ ನೀಡಿರುವುದು ಸಾಮಾನ್ಯ ಹೇಳಿಕೆಯಲ್ಲ, ಅದು ದೇಶದಲ್ಲಿ ಅರಾಜಕತೆ ಹರಡುವ ಗಂಭೀರ ಪಿತೂರಿಯಾಗಿದೆ ಎಂದು ಪಿಯೂಷ್ ಗೋಯಲ್ ಅಭಿಪ್ರಾಯ ಪಟ್ಟಿದ್ದಾರೆ. ಜೊತೆಗೆ " ದೇಶದಲ್ಲಿ ಗಲಭೆಗಳನ್ನ ಸೃಷ್ಟಿಸಿ, ಮೋದಿ ಸರ್ಕಾರವನ್ನ ಉರುಳಿಸಲು ರಾಹುಲ್ ಗಾಂಧಿ ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಖಂಡಿಸಿದ್ದಾರೆ.