ಅಯೋಧ್ಯೆ: ಹಿಂದುಗಳ ಶ್ರದ್ದಾ ಕೇಂದ್ರ ರಾಮ ಮಂದಿರದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಮೊದಲ ಬಾರಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್(Ram Janmabhoomi Trust) ಮಹತ್ವದ ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದೆ. ಈ ಪ್ರಕಟಣೆಯಲ್ಲಿ ಟ್ರಸ್ಟ್ ದೇವಸ್ಥಾನದಲ್ಲಿ ನಡೆದಿರುವ ಅಕ್ರಮವನ್ನ ಒಪ್ಪಿಕೊಂಡಿದ್ದು, ಮುಂದಿನ ದಿನಗಳಲ್ಲಿ ಈಗಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಟ್ರಸ್ಟ್, “ಕಳೆದ ಕೆಲವು ದಿನಗಳಿಂದ ಶ್ರೀರಾಮ ಮಂದಿರಕ್ಕೆ ಸಂಬಂಧಿಸಿದಂತೆ ವರದಿಯಾಗುತ್ತಿರುವ ಘಟನೆಗಳಿಂದ ನಮಗೆ ತೀವ್ರ ಆಘಾತವಾಗಿದೆ, ನೋವಾಗಿದೆ ಮತ್ತು ಆಳವಾದ ಸೌಹಾರ್ದತೆಗೆ ಧಕ್ಕೆಯಾಗಿದೆ. ಈ ಇಡೀ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಮತ್ತು ರಾಮಭಕ್ತರಿಗೆ ಸಂಪೂರ್ಣ ಭರವಸೆ ನೀಡಲು ನಾವು ಬದ್ಧರಾಗಿದ್ದೇವೆ” ಎಂದು ತಿಳಿಸಿದೆ.
ರಾಮಮಂದಿರ (Ram Mandir) ಆಂದೋಲನ ಹಾಗೂ ಮಂದಿರ ನಿರ್ಮಾಣದ ಉಸ್ತುವಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಇಬ್ಬರೂ ಹಿರಿಯ ಪದಾಧಿಕಾರಿಗಳ ರಾಜೀನಾಮೆ ಪತ್ರಗಳು ಈಗಾಗಲೇ ಟ್ರಸ್ಟ್ ಕೈಸೇರಿದ್ದು, ಮುಂಬರುವ ಟ್ರಸ್ಟ್ನ ತುರ್ತು ಸಭೆಯಲ್ಲಿ ಈ ರಾಜೀನಾಮೆಗಳ ಅಂಗೀಕಾರ ಹಾಗೂ ಮುಂದಿನ ಕ್ರಮಗಳ ಕುರಿತು ಸುದೀರ್ಘ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಭಕ್ತರ ಚಿನ್ನ-ಬೆಳ್ಳಿ ಸಂಪೂರ್ಣ ಸುರಕ್ಷಿತ
ಮಂದಿರದ ದೇಣಿಗೆ ಹಾಗೂ ವಸ್ತುಗಳ ಸುರಕ್ಷತೆಯ ಬಗ್ಗೆ ಎದ್ದಿರುವ ಅನುಮಾನಗಳಿಗೆ ತೆರೆ ಎಳೆದಿರುವ ಟ್ರಸ್ಟ್, “ಪ್ರಭು ಶ್ರೀರಾಮನಿಗೆ ಅರ್ಪಿಸಲು ಭಕ್ತರು ವೈಯಕ್ತಿಕವಾಗಿ ಟ್ರಸ್ಟ್ ಅಧಿಕಾರಿಗಳಿಗೆ ಹಸ್ತಾಂತರಿಸಿದ ಬೆಳ್ಳಿ ಇಟ್ಟಿಗೆಗಳು, ಚಿನ್ನಾಭರಣಗಳು ಸೇರಿದಂತೆ ಪ್ರತಿಯೊಂದು ವಸ್ತುವೂ ಅತ್ಯಂತ ಸುರಕ್ಷಿತವಾಗಿದೆ. ಪ್ರತಿಯೊಂದಕ್ಕೂ ಸಂಪೂರ್ಣ ಲೆಕ್ಕಪತ್ರವಿದ್ದು, ಭಕ್ತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಯಾವುದೇ ದುರದೃಷ್ಟಕರ ಪರಿಸ್ಥಿತಿ ಮರುಕಳಿಸದಂತೆ ನಾವು ಎಲ್ಲಾ ರೀತಿಯ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ದೇಶದ ಕೋಟ್ಯಂತರ ರಾಮಭಕ್ತರಿಗೆ ಭರವಸೆ ನೀಡಿದೆ.