ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಂ.14 ಪ್ರಮೋದ್ ಅವರು ಸರ್ಕಾರಿ ಸಾಕ್ಷಿಯಾಗಲು (Approver) ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದ ವಿಚಾರಣೆಯಲ್ಲಿ ಹೊಸ ಬೆಳವಣಿಗೆ ನಡೆದಿದೆ. ಪ್ರಮೋದ್ ಅವರ ಕ್ಷಮಾಪಣಾ ಅರ್ಜಿಗೆ ಸಂಬಂಧಿಸಿದ ಹೇಳಿಕೆ ಹಾಗೂ ಸಾಕ್ಷ್ಯ ದಾಖಲಿಸುವ ಪ್ರಕ್ರಿಯೆಯನ್ನು ಒಂದು ವಾರದ ಮಟ್ಟಿಗೆ ದಾಖಲಿಸದಂತೆ ನ್ಯಾಯಾಲಯ ಸೂಚಿಸಿದೆ ಎಂದು ವರದಿಯಾಗಿದೆ.
ಪ್ರಮೋದ್ ಅವರು ಪ್ರಕರಣದ ಸಂಪೂರ್ಣ ಸತ್ಯ ಹಾಗೂ ತಮ್ಮ ತಿಳುವಳಿಕೆಯಲ್ಲಿರುವ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ಹೇಳಿ ಸರ್ಕಾರಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪ್ರಕರಣದ ಇತರ ಆರೋಪಿಗಳ ಪರ ವಕೀಲರು ವಿರೋಧಿಸಿದ್ದರು. ಆದರೆ, ಈ ಹಂತದಲ್ಲಿ ಸಹ ಆರೋಪಿಗಳು ಪ್ರಮೋದ್ ಅವರ ಅರ್ಜಿಯನ್ನು ವಿರೋಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸೋಮವಾರ ಹೇಳಿತ್ತು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿ ಆರೋಪಿಗಳಾಗಿದ್ದು, ಪ್ರಕರಣದ ವಿಚಾರಣೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ನಡುವೆ ಮತ್ತಿಬ್ಬರು ಆರೋಪಿಗಳಾದ ರವಿಶಂಕರ್ ಹಾಗೂ ವಿನಯ್ ಕೂಡ ಸರ್ಕಾರಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸುವ ಉದ್ದೇಶ ವ್ಯಕ್ತಪಡಿಸಿರುವುದು ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದೆ.