ಹೈದರಬಾದ್ : ನಿನ್ನೆ ನಡೆದ ಆರ್ಸಿಬಿ-ಎಸ್ಆರ್ಎಚ್ ಪಂದ್ಯ ಭಾರೀ ಹೈಡ್ರಾಮಕ್ಕೆ ಕಾರಣವಾಗಿದೆ. ವಿರಾಟ ಕೊಹ್ಲಿ ಮತ್ತು ಟ್ರಾವಿಸ್ ಹೆಡ್ ನಡುವೆ ಕ್ರೀಡಾಂಗಣದೊಳಗೆ ವಾಕ್ಸಮರ ನಡೆದಿದ್ದು. ಪಂದ್ಯ ಮುಗಿದ ನಂತರವೂ ಇಬ್ಬರು ಆಟಗಾರರ ನಡುವಿನ ಜಗಳ ಮುಂದುವರಿದಿದೆ. ಜೊತೆಗೆ ಪಂದ್ಯದ ಬಳಿಕ ಕೊಹ್ಲಿ ನಡೆದುಕೊಂಡು ರೀತಿ ಇದೀಗ ಚರ್ಚಾ ವಿಷಯವಾಗಿದೆ.
ಟ್ರಾವಿಸ್ ಹೆಡ್ ಕೆಣಕ್ಕಿದ್ದ ವಿರಾಟ್..!
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ಪರ ಟ್ರಾವಿಸ್ ಹೆಡ್ (26) ರನ್ ಗಳಿಸಿ ರಾಸಿಖ್ ಸಲಾಮ್ ಅವರ ಯಾರ್ಕರ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆಗಿದ್ದರು. ಇತ್ತ ಔಟಾಗಿ ಹೊರ ನಡೆಯುತ್ತಿದ್ದ ಹೆಡ್ ಅವರ ಮುಂದೆ ಆಕ್ರೋಶಭರಿತರಾಗಿ ವಿರಾಟ್ ಕೊಹ್ಲಿ ಸಂಭ್ರಮಿಸಿದ್ದರು. ಇದಾಗ್ಯೂ ಟ್ರಾವಿಸ್ ಹೆಡ್ ಯಾವುದೇ ತಿರುಗೇಟು ನೀಡಿರಲಿಲ್ಲ. ಇದರ ಹೊರತಾಗಿಯು ಕೂಡ ತಂಡದ ಸಂಘಟಿತ ಪ್ರದರ್ಶನದ ಫಲವಾಗಿ ಹೈದರಬಾರ್ ನಿಗಧಿತ ಓವರ್ಗಳಲ್ಲಿ 256ರನ್ಗಳ ಬೃಹತ್ ಮೊತ್ತವನ್ನ ಕಲೆ ಹಾಕಿತು.
ಬೃಹತ್ ರನ್ಗಳ ಗುರಿಯನ್ನ ಬೆನ್ನತ್ತಲು ಬಂದ ವಿರಾಟ್ ಕೊಹ್ಲಿಗೆ ಆಕ್ರಮಣಕಾರಿಯಾಗಿ ಆಡುವಂತೆ ಟ್ರಾವಿಸ್ ಹೆಡ್ ಸವಾಲು ಹಾಕಿದರು ಅಂದರೆ ಈ ಪಂದ್ಯದಲ್ಲಿ ಕೊಹ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ್ದರು. ಈ ವೇಳೆ ಬಿಗ್ ಶಾಟ್ ಆಡು ನೋಡೋಣ ಎಂದು ಹೆಡ್ ಕೆಣಕಿದರು. ಆದರೆ ಈ ವೇಳೆ ಕುಪಿತಗೊಂಡ ವಿರಾಟ್ “ಈಗ ನೀನು ಇಂಪ್ಯಾಕ್ಟ್ ಸಬ್ ಆಟಗಾರ ಅಲ್ಲ, ಬಂದು ಎರಡು ಓವರ್ ಬೌಲಿಂಗ್ ಮಾಡು” ಎಂದು ವ್ಯಂಗ್ಯವಾಡಿದರು. ಆದರೆ ಈ ಮಾತಿನ ಚಕಮಕಿ ಮುಕ್ತಾಯಗೊಂಡ ಬೆನ್ನಲ್ಲೇ ವಿರಾಟ್ 15ರನ್ಗಳಿಗೆ ಔಟ್ ಆದರು, ಈ ವೇಳೆ ಪೆವಿಲಿಯನ್ ಕಡೆಗೆ ಮರಳುತ್ತಿದ್ದ ಕೊಹ್ಲಿಗೆ “ಫ್ರೆಂಡ್, ನಾನು ಬೌಲಿಂಗ್ ಮಾಡಲು ಬರುವ ಮುನ್ನವೇ ನೀನು ಔಟ್ ಆಗಿ ಹೋದೆ!” ಎಂದು ಟ್ರಾವಿಸ್ ಹೆಡ್ ಕಿಚಾಯಿಸಿದರು.
ಶೇಕ್ ಹ್ಯಾಂಡ್ ನೀಡದೆ, ಕ್ರೀಡಾ ಸ್ಪೂರ್ತಿ ಮರೆತರ ಕೊಹ್ಲಿ
ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ 55 ರನ್ಗಳ ಭರ್ಜರಿ ಜಯ ಸಾಧಿಸಿದ ನಂತರ, ಉಭಯ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡಲು ಮೈದಾನಕ್ಕೆ ಬಂದರು. ಈ ವೇಳೆ ಟ್ರಾವಿಸ್ ಹೆಡ್ ಕೈ ಚಾಚಿದರೂ, ವಿರಾಟ್ ಕೊಹ್ಲಿ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಮುಖ ತಿರುಗಿಸಿಕೊಂಡು ನೇರವಾಗಿ ಪ್ಯಾಟ್ ಕಮಿನ್ಸ್ ಕಡೆಗೆ ನಡೆದು ಹೋದರು. ಅಂದರೆ ಹೆಡ್ಗೆ ಶೇಕ್ ಹ್ಯಾಂಡ್ ಮಾಡಲು ನಿರಾಕರಿಸಿದರು. ಇದೀಗ ವಿರಾಟ್ ಕೊಹ್ಲಿಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಅಲ್ಲದೆ ಈ ವಿಡಿಯೋಗೆ ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.
ಇದರ ನಡುವೆ ಕೊಹ್ಲಿ ಕ್ರೀಡಾ ಸ್ಫೂರ್ತಿಯನ್ನೇ ಮರೆತರ ಎಂಬ ಚರ್ಚೆಗಳು ಆರಂಭಗೊಂಡಿದ್ದು. ಮೈದಾನದಲ್ಲಿ ಎಷ್ಟೇ ತೀವ್ರವಾದ ಪೈಪೋಟಿ, ವೈಷಮ್ಯ ಅಥವಾ ಸ್ಲೆಡ್ಜಿಂಗ್ ನಡೆದಿದ್ದರೂ, ಪಂದ್ಯ ಮುಗಿದ ತಕ್ಷಣ ಆಟಗಾರರು ಕೈಕುಲುಕುವ ಮೂಲಕ ಆ ಎಲ್ಲ ಕಹಿ ಘಟನೆಗಳನ್ನು ಮೈದಾನದಲ್ಲೇ ಬಿಟ್ಟು ಬರಬೇಕು ಎಂಬುದು ಕ್ರಿಕೆಟ್ನ ಅಲಿಖಿತ ನಿಯಮ. ಟ್ರಾವಿಸ್ ಹೆಡ್ ಪಂದ್ಯದ ನಂತರ ಹಳೆಯದ್ದನ್ನು ಮರೆತು ಕೈ ಚಾಚಿದಾಗ, ಕೊಹ್ಲಿ ಅದನ್ನು ಉದ್ದೇಶಪೂರ್ವಕವಾಗಿ ನಿರಾಕರಿಸಿದ್ದು ಕ್ರೀಡೆಯ ಮೂಲ ಆಶಯಕ್ಕೆ ಧಕ್ಕೆ ತಂದಿದೆ.