ಈ ಪ್ರಶ್ನೆಯನ್ನು ಎಷ್ಟು ಬಾರಿ ಎಷ್ಟು ಜನರು ಕೇಳುತ್ತಾರೆ. ಆದರೆ ಉತ್ತರ ಕೊಡುವವರು ಮಾತ್ರ ಇದರಲ್ಲಿ Science ಅಂತ ಮತ್ತೊಂದು ಮಗದೊಂದು ಕಾರಣ ಹೇಳುತ್ತಾ ಇರುತ್ತಾರೆ. ನನಗೆ ತಿಳಿದ ಕಾರಣ ಹೇಳುತ್ತೇನೆ!
ಮುಟ್ಟಿನ ಸಮಯದಲ್ಲಿ ಸ್ತ್ರೀ ಅಶುದ್ಧಳು!
ಈಗ ನನ್ನನ್ನು, ಹಿಂದೂ ಧರ್ಮವನ್ನು ನೀವು ಸ್ತ್ರೀ ವಿರೋಧಿ ಅಂತ ಅಂದುಕೊಳ್ಳಬಹುದು. ಆದರೆ ನಿಯಮಗಳು ಕೇವಲ ಸ್ತ್ರೀಯರಿಗೆ ಮಾತ್ರವಲ್ಲ ಪುರುಷರಿಗೂ ಇವೆ!
ದೇವಕಾರ್ಯ, ಪಿತೃಕಾರ್ಯ ಮಾಡುವಾಗ ಪುರುಷರೂ ಕೂಡ ಹಲವು ಶುದ್ಧತಾ ನಿಯಮಗಳನ್ನು ಪಾಲಿಸಬೇಕು. ಶಾಸ್ತ್ರಾನುಸಾರ ದೇಹದಿಂದ ಯಾವ ವಸ್ತು ಹೊರ ಬಂದರೂ ಅದನ್ನು ಅಶುದ್ಧ ಅಂತಲೇ ಹೇಳಲಾಗುತ್ತದೆ. ಅಂದರೆ ಉಗುಳು, ವೀರ್ಯ, ರಕ್ತ, ಮೂತ್ರ, ಮಲ ಇತ್ಯಾದಿ. ಇಷ್ಟೇ ಅಲ್ಲ ಪೂಜೆಗೆ ಕುಳಿತಾಗ ಕೆಮ್ಮಿದರೂ, ಸೀನಿದರೂ, ಆಕಳಿಸಿದರೂ, ಹೂಸು ಬಿಟ್ಟರೂ ಅದನ್ನು ಅಪವಿತ್ರ ಅಂತಲೇ ಕರೆಯುತ್ತಾರೆ! ಆ ತಕ್ಷಣ ಎದ್ದು ಸ್ನಾನ ಮಾಡಿ ಪುನಃ ಆಚಮನ ಮಾಡಬೇಕು.
ಆದರೆ ಪ್ರತಿಬಾರಿ ಸೀನಿದಾಗ ಸ್ನಾನ ಮಾಡಿ ಬಂದು ಮತ್ತೆ ಸೀನಿದರೆ? ಮತ್ತೆ ಸ್ನಾನ ಮತ್ತೆ ಅದೇ ಕಥೆಯೇ? ಹೀಗಾದರೆ ಪೂಜೆ ಮುಗಿಯುವುದಿಲ್ಲ. ಅದಕ್ಕೆ ಪರ್ಯಾಯ ವ್ಯವಸ್ಥೆ ಎನ್ನುವಂತೆ ಒಂದು ಸರಳ ಉಪಾಯ ಹೇಳಿದ್ದಾರೆ. ನಮ್ಮ ಬಲಗಿವಿಯಲ್ಲಿ ಗಂಗೆಯ ಸ್ಥಾನ ಇರುತ್ತದಂತೆ. ಹಾಗಾಗಿ ಪೂಜೆ ಮಾಡುವಾಗ ಕೆಮ್ಮು, ಸೀನು ಇತ್ಯಾದಿ ಬಂದರೆ ನಮ್ಮ ಬಲಗೈ ಇಂದ ಬಲ ಕಿವಿ ಮುಟ್ಟಿ ಅಚ್ಯುತ ಅನಂತ ಗೋವಿಂದ (ನಾಮ ತ್ರಯ) ಎಂದು ಹೇಳಿದರೆ ಗಂಗಾ ಸ್ನಾನದ ಫಲ ಲಭಿಸುತ್ತದೆ ಅಂತ ಹಿರಿಯರು ಹೇಳುತ್ತಾರೆ. ಆದರೆ ಈ ಉಪಾಯ ಮಲ ಮೂತ್ರ ವಿಸರ್ಜನೆಗೆ ಅನ್ವಯಿಸುವುದಿಲ್ಲ. ಆಗ ಸ್ನಾನ ಮಾಡಿ ಪುನಃ ಆಚಮನ ಮಾಡಲೇಬೇಕು.
ಇನ್ನು ನೀವು ಸ್ನಾನ ಮಾಡಿ ತಯಾರಾಗಿ ದೇವಸ್ಥಾನಕ್ಕೆ ಹೋಗುತ್ತಿದ್ದೀರಿ ಅಂತ ಅಂದುಕೊಳ್ಳಿ. ಆಗ ಏನೋ ಆಗಿ ನಿಮ್ಮ ಮೈಯಿಂದ ರಕ್ತ ಸ್ರವಿಸಿದರೆ, ಆ ಸ್ರಾವ ನಿಂತ ಮೇಲೆ ಪುನಃ ಸ್ನಾನ ಮಾಡಿ ನಂತರ ಹೋಗಬೇಕು. ಇದೇ ನಿಯಮ ಇರುವುದು. ಹಾಗಾಗಿ ರಕ್ತ, ಮಲ, ಮೂತ್ರ, ವೀರ್ಯ ಇತ್ಯಾದಿ ಸ್ರವಿಸುವ ಸ್ಥಿತಿ ಇದ್ದಾಗ ಪುರುಷ ಮತ್ತು ಮಹಿಳೆಯರು ಇಬ್ಬರೂ ವೈದಿಕ ಕರ್ಮಕಾಂಡಗಳಿಗೆ ಅನರ್ಹರು!
ಹಾಗಾಗಿ ಮಾಸಿಕ ಧರ್ಮದ ಸಮಯದಲ್ಲಿ ರಕ್ತಸ್ರಾವ ಇರುವಷ್ಟು ದಿನ ವೈದಿಕ ದೇವತಾರಾಧನೆ ವರ್ಜ್ಯ! ಅಂದರೆ ದೇವರು ಈ ಸಮಯದಲ್ಲಿ ಮಹಿಳೆಯ ಹತ್ತಿರ ಬರುವುದಿಲ್ಲವೇ? ಖಂಡಿತ ಹಾಗಲ್ಲ! ಮಹಾಭಾರತದ ಪ್ರಕಾರ ದ್ರೌಪದಿ ವಸ್ತ್ರಾಪಹರಣ ಸಮಯದಲ್ಲಿ ಆಕೆ ಮಾಸಿಕ ಧರ್ಮದಲ್ಲಿ ಇದ್ದಳು. ಆದರೂ ಆಕೆ ಕೃಷ್ಣನನ್ನು ಕರೆಯಲಿಲ್ಲವೇ? ಕೃಷ್ಣ ಅವಳ ಮಾನ ಉಳಿಸಲಿಲ್ಲವೇ? ಮತ್ತೇಕೆ ಈ ನಿಯಮಗಳು ಅಂತೀರಾ? ನಿಯಮಗಳು ಭಗವನ್ನಾಮ ಸ್ಮರಣೆಗೆ ಅಲ್ಲ ಕರ್ಮ ಸಂಸ್ಕಾರಗಳಿಗೆ ಮಾತ್ರ! ಸರ್ವತ್ರ ವ್ಯಾಪ್ತವಾಗಿರುವ ಶಕ್ತಿಯನ್ನು ಒಂದು ಸ್ಥಾನದಲ್ಲಿ ಆವಾಹಿಸಿದಾಗ ನಿಯಮ ಪಾಲನೆ ಅವಶ್ಯ! ಎಲ್ಲೆಡೆ ಇರುವ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಿದಾಗ ಅಲ್ಲಿ ನಿಯಮಗಳ ಪಾಲನೆ ಮಾಡಲಾಗುತ್ತದೆ. ಹಸಿ ಬಟ್ಟೆ, ಮೈಯಿಂದ ಕರೆಂಟ್ ಬೋರ್ಡನ್ನು ಮುಟ್ಟುವುದಿಲ್ಲ.
ಇದು ವೈದಿಕ ನಿಯಮ. ಆದರೆ ನಮ್ಮ ಹಿಂದೂ ಸಂಸ್ಕೃತಿಯ ವಿಶೇಷತೆ ಗೊತ್ತೇ? ಎಲ್ಲಾ ಕಡೆಯೂ ಎಲ್ಲ ನಿಯಮಗಳು ಒಂದೇ ತರಹ ಇರುವುದಿಲ್ಲ! ಕೆಲವು ತಂತ್ರ ಶಾಸ್ತ್ರಗಳ ನಿಯಮಗಳು ಬೇರೆಯೇ ಇರುತ್ತವೆ! ಕೆಲವು ತಂತ್ರಗಳ ಪ್ರಕಾರ ಸ್ತ್ರೀಯ ಮಾಸಿಕ ರಕ್ತವು ಶುದ್ಧ! ಅದನ್ನು ಸಾಧನೆಗೆ ಬಳಸುತ್ತಾರಂತೆ! ವಾಮಾಚಾರ ಮಾರ್ಗದಲ್ಲಿ ಈ ಮಾಸಿಕ ರಕ್ತವನ್ನು "ರಾಜಸ" ಅಂತ ಕರೆಯುತ್ತಾರೆ. ಇದನ್ನು ಕೆಲವು ಪ್ರಯೋಗಗಳಿಗೆ ಬಳಸುತ್ತಾರೆ! ಇದು ಗೌಪ್ಯ ವಿಚಾರ.